ಇದುವರೆಗೂ ನಾನಾ ಸಿನಿಮಾಗಳಲ್ಲಿ ಮಂಗಳಮುಖಿಯರು ಬಂದು ಹೋಗಿದ್ದಾರೆ. ಆದರೆ ಮಂಗಳಮುಖಿಯರ ನೈಜ ಜಗತ್ತಿನ ಬಗ್ಗೆ, ಅವರ ಬದುಕಿನ ನಾನಾ ಮಜಲುಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ ಚಿತ್ರಗಳು ಬಂದಿದ್ದು ವಿರಳ. ಇದೀಗ ಅಂಥಾದ್ದೊಂದು ಚಿತ್ರಕ್ಕೆ ಚಾಲನೆ ಸಿಕ್ಕಿಗೆ. ಮಂಗಳಮುಖಿಯರ ಬಗೆಗೇ ಸಂಪೂರ್ಣವಾಗಿ ಫೋಕಸ್ ಆಗಿರೋ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅದೇ ಸಮಯದಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯವೂ ಸಮಾಪ್ತಿಗೊಂಡಿದೆ.
ಇನ್ನೂ ಹೆಸರಿಡದ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಚಿತ್ರೀಕರಣಗೊಳ್ಳುತ್ತಿದೆ. ಪಿ.ರಾಜಾ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಭರತ್ ಹಾಗೂ ಅಕ್ಷಿತಾ ನಾಯಕ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಬೆಂಗಳೂರಿನ ಶ್ರೀ ಸಾಯಿಸ್ವರ ಸ್ಟುಡಿಯೋದಲ್ಲಿ ಸಂಜೀವ್ ಮೇಗೂಟಿ ಸಂಗೀತದ ಹಾಡುಗಳ ಧ್ವನಿ ಮುದ್ರಣ ಈಗಾಗಲೇ ಮುಗಿದಿದ್ದು, ಬೆಂಗಳೂರು ಮತ್ತು ಹೈದ್ರಾಬಾದ್ಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಹಾಡುಗಳಿಗೆ ಸಿನಿಮಾ ಪತ್ರಕರ್ತರಾದ ಸ್ನೇಹಪ್ರಿಯಾ ನಾಗರಾಜ್ ಹಾಗೂ ಸುಧೀಂದ್ರ ಸಾಹಿತ್ಯ ಒದಗಿಸಿದ್ದಾರೆ.
ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಂಗಳಮುಖಿಯರದ್ದು ನಿಗೂಢ ಲೋಕ. ಅದರೊಳ ಹೊಕ್ಕು ಆ ಲೋಕವನ್ನು ಚಿತ್ರವೊಂದರ ಮೂಲಕ ಅನಾವರಣಗೊಳಿಸುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಆ ಸವಾಲನ್ನು ಈ ಚಿತ್ರ ತಂಡ ಉತ್ಸಾಹದಿಂದಲೇ ಸ್ವೀಕರಿಸಿದೆ. ಸತ್ಯ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡ ಈ ಸಾಹಸಕ್ಕೆ ಟಿವಿಎನ್ಆರ್ ಸಂತೋಷ್ ಹಾಗೂ ಚೀರ್ಲಾ ಶ್ರೀನಿವಾಸ ಯಾದವ್ ಹಣ ಹೂಡುವ ಮೂಲಕ ಒತ್ತಾಸೆಯಾಗಿದ್ದಾರೆ.